ದೇವನಹಳ್ಳಿ: ವಿಚ್ಛೇದನ ನೀಡದೇ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದ ಗಂಡನ ಮದುವೆಯನ್ನು ಮೊದಲ ಹೆಂಡತಿ ಅಡ್ಡಿಪಡಿಸಿದ ಘಟನೆ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಮುನೇಶ್ವರ ದೇವಾಲಯದ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
“ದೇವನಹಳ್ಳಿಯಲ್ಲಿ ಗಂಡನ ಎರಡನೇ ಮದುವೆಯನ್ನು ಮೊದಲ ಹೆಂಡತಿ ಅಕ್ಕ ಪಡೆಯೊಂದಿಗೆ ಆಗಮಿಸಿ ತಡೆದು, ಪೊಲೀಸರು ಗಂಡನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.”
ಹೊಸಕೋಟೆಯ ಸುರೇಶ್ ಮತ್ತು ನಾಗಮಣಿ ಸುಮಾರು 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಇ
ಬ್ಬರು ಮಕ್ಕಳು ಸಹ ಇದ್ದಾರೆ. ಇತ್ತೀಚಿನ ಕುಟುಂಬ ಕಲಹದ ಹಿನ್ನೆಲೆ ದಂಪತಿ ಬೇರ್ಪಟ್ಟು ವಾಸಿಸುತ್ತಿದ್ದರು.
ಈ ಸಂದರ್ಭವನ್ನು ಬಳಸಿಕೊಂಡು ಸುರೇಶ್ ವಿಚ್ಛೇದನ ನೀಡದೇ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾನೆ. ಮದುವೆ ನಡೆಯುತ್ತಿರುವ ವಿಚಾರ ತಿಳಿದ ಮೊದಲ ಹೆಂಡತಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ನಂತರ ಅಕ್ಕ ಪಡೆಯೊಂದಿಗೆ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಮೊದಲ ಹೆಂಡತಿ ಮದುವೆಯನ್ನು ತಡೆದಿದ್ದಾರೆ. ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ಮದುವೆ ಕಾರ್ಯಗಳು ಸ್ಥಗಿತಗೊಂಡಿವೆ.
ಸುರೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಮಹಿಳಾ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.





