ಮನೆಜಿಲ್ಲೆ ಸುದ್ದಿಚಿತ್ರದುರ್ಗರಣಬಿಸಿಲಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ..!?

ರಣಬಿಸಿಲಲ್ಲಿ ಬಂದೂಕು ಹೊತ್ತು ನಿಲ್ಲುವ ಶಿಕ್ಷೆ ..!?

ಚಿತ್ರದುರ್ಗದ ಚಿಕ್ಕಜಾಜೂರು ಠಾಣೆಯ ಪಿಎಸ್‌ಐ ನೇತ್ರಾವತಿ,ಕರ್ತವ್ಯ ಲೋಪದ ಆರೋಪದ ಮೇಲೆ 12ಮಂದಿ  ಸಿಬ್ಬಂದಿಗೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದಾರೆ. ಈ ಅಮಾನವೀಯ ಶಿಕ್ಷೆಯಿಂದಾಗಿ ಕೆಲಸಿಬ್ಬಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಘಟನೆಯ ಬಗ್ಗೆ ಎಸ್ಪಿ ತನಿಖೆಗೆ ಆದೇಶಿಸಿದ್ದಾರೆ.

ಚಿತ್ರದುರ್ಗ: ಶಿಸ್ತಿನ ಇಲಾಖೆ ಎಂದೇ ಕರೆಯಲ್ಪಡುವ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಶಿಕ್ಷೆ ನೀಡುವುದು ಹೊಸದೇನು ಅಲ್ಲ. ಆದರೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ನೇತ್ರಾವತಿ ಅವರು ತಮ್ಮದೇ ಸಿಬ್ಬಂದಿಗೆ ನೀಡಿರುವ ಶಿಕ್ಷೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕರ್ತವ್ಯ ಲೋಪದ ಹೆಸರಿನಲ್ಲಿ ಬರೋಬ್ಬರಿ 12 ಮಂದಿ ಸಿಬ್ಬಂದಿಯನ್ನು ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿದ್ದು, ಇಲಾಖೆಯ ಒಳಗಿನ ಶಿಸ್ತು ಮತ್ತು ಮಾನವೀಯತೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ.
Oplus_16908288

ಚಿಕ್ಕಜಾಜೂರು ಠಾಣೆಯ ಪಿಎಸ್‌ಐ ನೇತ್ರಾವತಿ ಅವರು ತಮ್ಮ ಠಾಣೆಯ ಎಎಸ್‌ಐ (ASI) ಸೇರಿದಂತೆ ಒಟ್ಟು 12 ಮಂದಿ ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಅಂದರೆ ಸೂರ್ಯನ ಶಾಖ ಅತಿ ಹೆಚ್ಚಿರುವ ಸಮಯದಲ್ಲಿ, ಸಿಬ್ಬಂದಿಯನ್ನು ಠಾಣೆಯ ಹೊರಗೆ ನಿಲ್ಲಿಸಲಾಗಿದೆ. ಕೇವಲ ನಿಲ್ಲಿಸುವುದು ಮಾತ್ರವಲ್ಲದೆ, ಹೆಗಲ ಮೇಲೆ ಭಾರವಾದ ಬಂದೂಕುಗಳನ್ನು (Rifles) ಹೊತ್ತು ನಿಲ್ಲುವಂತೆ ಆದೇಶಿಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ಅಗ್ನಿ ಉಗುಳುವ ಬಿಸಿಲಿನಲ್ಲಿ ಸಿಬ್ಬಂದಿ ಈ ಶಿಕ್ಷೆಯನ್ನು ಅನುಭವಿಸಿದ್ದಾರೆ.

ಅಸ್ವಸ್ಥಗೊಂಡ ಪೊಲೀಸರು:
ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಸ್ತುತ ತಾಪಮಾನ ಏರಿಕೆಯಾಗಿದ್ದು, ಜನಸಾಮಾನ್ಯರೇ ಹೊರಬರಲು ಭಯಪಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ 3 ಗಂಟೆಗಳ ಕಾಲ ಬಂದೂಕು ಹೊತ್ತು ಬಿಸಿಲಿನಲ್ಲಿ ನಿಂತ ಪರಿಣಾಮ, ಶಿಕ್ಷೆ ಅನುಭವಿಸಿದ ಸಿಬ್ಬಂದಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಕೆಲವರು ತೀವ್ರ ಸುಸ್ತಿನಿಂದ ಬಳಲಿದರೆ, ಇನ್ನು ಕೆಲವರಿಗೆ ತಲೆಸುತ್ತು ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ ಕೆಲ ಸಿಬ್ಬಂದಿಯನ್ನು ತಕ್ಷಣವೇ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆಯಿಂದ ಪೊಲೀಸ್ ಸಿಬ್ಬಂದಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತನಿಖೆಗೆ ಆದೇಶಿಸಿದ ಎಸ್ಪಿ:

ಪಿಎಸ್‌ಐ ಅವರ ಈ ನಡೆ ‘ದರ್ಪ’ದ ಪರಮಾವಧಿ ಎಂದು ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದರೆ ಇಲಾಖಾ ತನಿಖೆ ನಡೆಸಿ ನೋಟಿಸ್ ನೀಡಬಹುದಿತ್ತು ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳಬಹುದಿತ್ತು. ಅದನ್ನು ಬಿಟ್ಟು ಇಂತಹ ಅಮಾನವೀಯ ಶಿಕ್ಷೆ ನೀಡಿರುವುದು ಎಷ್ಟುಸರಿ ಎಂಬ ಪ್ರಶ್ನೆಎದ್ದಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಎಸ್ಪಿ ರಂಜಿತ್ ಬಂಡಾರು ಅವರು ಘಟನೆಯನ್ನು ಗಂಭೀರ ವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ಗಿರೀಶ್ ಗೌಡ ಅವರಿಗೆ ಸೂಚನೆ ನೀಡಿದ್ದಾರೆ..

ಮಾನವ ಹಕ್ಕುಗಳ ಉಲ್ಲಂಘನೆಯೇ?
ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯ ನಿಜ, ಆದರೆ ಶಿಕ್ಷೆಯ ಹೆಸರಿನಲ್ಲಿ ಸಿಬ್ಬಂದಿಯ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಿಎಸ್‌ಐ ನೇತ್ರಾವತಿ ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗುತ್ತಿದ್ದು, ತನಿಖಾ ವರದಿಯ ನಂತರ ಅವರ ವಿರುದ್ಧ ಯಾವ ರೀತಿಯ ಕ್ರಮ ಜರುಗಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ,ರಕ್ಷಣೆ ನೀಡ ಬೇಕಾದ ಪೊಲೀಸರೇ ತಮ್ಮ ಅಧಿಕಾರಿಯ ದರ್ಪಕ್ಕೆ ಬಲಿಯಾಗಿ ಆಸ್ಪತ್ರೆ ಸೇರಿರುವುದು ಇಲಾಖೆಗೆ ಮುಜುಗರ ತಂದಿಟ್ಟಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -

Most Popular

Recent Comments